Monday, February 27, 2012

ಕಾನೂನುಬಾಹಿರ ವ್ಯವಹಾರ: ಖಾಸಗಿ ಶಾಲೆಗಳಿಗೆ ಕಡಿವಾಣ-ಕಾಲೇಜುಗಳಿಗೂ ಅನ್ವಯ-ಪ್ರಜಾವಾಣಿ ವಾರ್ತೆ

ನವದೆಹಲಿ: ಖಾಸಗಿ ಶಾಲಾ ಆಡಳಿತ ಮಂಡಳಿಗಳೇ ಎಚ್ಚರ! ನೀತಿ- ನಿಯಮಗಳನ್ನು ಮೀರಿ ವಿದ್ಯಾರ್ಥಿಗಳು ಮತ್ತು ಪೋಷಕರನ್ನು ಸುಲಿಗೆ ಮಾಡಿದರೆ ದಂಡನೆಗೆ ಒಳಗಾಗುವಿರಿ! ಪ್ರಾಥಮಿಕ- ಪ್ರೌಢ ಶಾಲೆಗಳ ಕಾನೂನು ಬಾಹಿರ ವ್ಯವಹಾರಗಳಿಗೆ ಕಡಿವಾಣ ಹಾಕಲು ಪರಿಣಾಮಕಾರಿಯಾದ ಮಸೂದೆಯೊಂದನ್ನು ರೂಪಿಸಿ, ಜಾರಿಗೊಳಿಸಲು ಕೇಂದ್ರದ ಯುಪಿಎ ಸರ್ಕಾರ ಉದ್ದೇಶಿಸಿದೆ. ಈ ಮಸೂದೆ ಕಿರಿಯ ಕಾಲೇಜುಗಳಿಗೂ ಅನ್ವಯವಾಗಲಿದೆ.

ಡೊನೇಷನ್ ಹಾವಳಿ ಸೇರಿದಂತೆ ಖಾಸಗಿ ಶಾಲೆಗಳ `ಕಾನೂನು ಬಾಹಿರ ವ್ಯವಹಾರ`ಗಳಿಗೆ ಕಡಿವಾಣ ಹಾಕಲು ಈ ಮಸೂದೆ ರೂಪಿಸಲಾಗುತ್ತಿದೆ. ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ಇಂಥ ಮಸೂದೆ ಈಗಾಗಲೇ ಸಂಸತ್ತಿನ ಒಪ್ಪಿಗೆಗಾಗಿ ಕಾದು ಕುಳಿತಿದೆ.

`ಖಾಸಗಿ ಶಾಲೆಗಳ ಮಾನ್ಯತೆ ನಿಯಮಾವಳಿ` (ಬೈಲಾ) ಮೀರುವ ಶಾಲೆಗಳ ಆಡಳಿತ ಮಂಡಳಿಗಳ ಮೇಲೆ ಸಿವಿಲ್- ಕ್ರಿಮಿನಲ್ ಮೊಕದ್ದಮೆ ಹೂಡಲು ಹೊಸದಾಗಿ ಅಸ್ತಿತ್ವಕ್ಕೆ ಬರಲಿರುವ ಮಸೂದೆಯಲ್ಲಿ ಅವಕಾಶವಿದೆ. ತಪ್ಪಿತಸ್ಥ ಶಾಲೆಗಳಿಗೆ 50 ಸಾವಿರದಿಂದ 5 ಲಕ್ಷದವರೆಗೆ ದಂಡ ಹಾಕಲು ಇಲ್ಲವೆ, ಆಡಳಿತ ಮಂಡಳಿ ಮುಖ್ಯಸ್ಥರನ್ನು 1 ತಿಂಗಳಿಂದ ಗರಿಷ್ಠ 3 ವರ್ಷಗಳವರೆಗೆ ಜೈಲಿಗೆ ಕಳುಹಿಸುವ ಅಧಿಕಾರವೂ ಇರುತ್ತದೆ.

ಈ ನಿಗದಿತ ಚೌಕಟ್ಟಿನೊಳಗೆ ಹೊಸ ಮಸೂದೆ ರೂಪಿಸಲು ಮಾನವ ಸಂಪನ್ಮೂಲ ಸಚಿವಾಲಯದ ರಾಜ್ಯ ಸಚಿವೆ ಪುರಂದರೇಶ್ವರಿ ನೇತೃತ್ವದಲ್ಲಿ 22ಸದಸ್ಯರ ಸಮಿತಿ ರಚಿಸಲಾಗಿದೆ. ಕೆಲ ರಾಜ್ಯಗಳ ಶಿಕ್ಷಣ ಸಚಿವರು ಮತ್ತು ಶಿಕ್ಷಣ ತಜ್ಞರು ಸದಸ್ಯರಾಗಿರುವ ಈ ಸಮಿತಿಯ ಮೊದಲ ಸಭೆ ಈಚೆಗೆ ನಡೆಯಿತು. ಡೊನೇಷನ್ ಹೆಸರಿನಲ್ಲಿ ಪೋಷಕರ `ಸುಲಿಗೆ` ನಡೆಯುತ್ತಿದೆ. `ಪ್ರಾಸ್ಪೆಕ್ಟಸ್`ಗಳನ್ನು ಹೆಚ್ಚಿನ ಬೆಲೆಗೆ ಮಾರಲಾಗುತ್ತಿದೆ.

ಅಗತ್ಯಕ್ಕಿಂತ ಹೆಚ್ಚು ಶುಲ್ಕ ವಸೂಲು ಮಾಡಲಾಗುತ್ತಿದೆ. ಪುಸ್ತಕ ಮತ್ತು ಸಮವಸ್ತ್ರಗಳನ್ನು ಶಾಲೆಯಲ್ಲೇ ಖರೀದಿಸುವಂತೆ ಒತ್ತಡ ಹಾಕಲಾಗುತ್ತಿದೆ ಎಂಬ ದೂರುಗಳು ಮೇಲಿಂದ ಮೇಲೆ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮಸೂದೆ ಜಾರಿಗೆ ಉದ್ದೇಶಿಸಿದೆ ಎಂದು ಮಾನವ ಸಂಪನ್ಮೂಲ ಸಚಿವಾಲಯದ ಉನ್ನತ ಮೂಲಗಳು `ಪ್ರಜಾವಾಣಿ`ಗೆ ತಿಳಿಸಿವೆ.

ಪ್ರವೇಶ ಪಾರದರ್ಶಕವಾಗಿರಬೇಕು. ಒಟ್ಟು ಸೀಟುಗಳ ಪ್ರಮಾಣ, ಪ್ರವೇಶ ವಿಧಾನ, ಸ್ಥಳೀಯರಿಗೆ ಎಷ್ಟು ಸೀಟು ಕೊಡಲಾಗಿದೆ ಇತ್ಯಾದಿ ಮಾಹಿತಿ ಬಹಿರಂಗಪಡಿಸಬೇಕು ಎಂಬ ನಿಯಮಗಳಿದ್ದರೂ ಶಾಲಾ ಆಡಳಿತ ಮಂಡಳಿಗಳು ಪಾಲಿಸುತ್ತಿಲ್ಲ. ಒಂದು ಶಾಲೆಯಿಂದ ಮತ್ತೊಂದು ಶಾಲೆಗೆ ವರ್ಗಾವಣೆ ಪಡೆದ ಸಂದರ್ಭದಲ್ಲಿ ವಿದ್ಯಾರ್ಥಿಯಿಂದ ಪಡೆದ ಶುಲ್ಕ ಹಿಂತಿರುಗಿಸುತ್ತಿಲ್ಲ.

ವಿದ್ಯಾರ್ಥಿಗಳನ್ನು ಆಕರ್ಷಿಸಲು ಸುಳ್ಳು ಜಾಹಿರಾತು ನೀಡಲಾಗುತ್ತಿದೆ. ಮೈದಾನ, ಕ್ರೀಡಾ ಸಾಮಗ್ರಿ, ಗ್ರಂಥಾಲಯ ಇಲ್ಲದಿದ್ದರೂ ಹಣ ಕೀಳಲಾಗುತ್ತಿದೆ. ಕಟ್ಟಡ ನಿಧಿ ವಸೂಲು ಮಾಡಲಾಗುತ್ತಿದೆ. ಈ ರೀತಿಯ ಕಾನೂನುಬಾಹಿರ ವ್ಯವಹಾರಗಳಿಗೆ ವಿರಾಮ ಹಾಕಬೇಕಾಗಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.

ದೇಶದಲ್ಲಿ ಸುಮಾರು 18 ಲಕ್ಷ ಶಾಲೆಗಳಿವೆ. ಇದರಲ್ಲಿ ಶೇ. 37ರಷ್ಟು ಖಾಸಗಿ ಶಾಲೆಗಳು. ಸಿಬಿಎಸ್‌ಇ ಮಾನ್ಯತೆ ಪಡೆಯುವ ಸಮಯದಲ್ಲಿ ಶಾಲಾ ಆಡಳಿತ ಮಂಡಳಿಗಳು ನೀತಿ- ನಿಯಮ ಹಾಗೂ ಷರತ್ತು ಪಾಲಿಸುವುದಾಗಿ `ಮುಚ್ಚಳಿಕೆ` ಬರೆದುಕೊಡುತ್ತವೆ. ಅದನ್ನು ಪಾಲಿಸುವುದಿಲ್ಲ. ಕಾನೂನು ಉಲ್ಲಂಘಿಸುವ ಶಾಲೆಗಳಿಗೆ ದಂಡ ಹಾಕಲು ಈಗಿರುವ ಕಾನೂನಿನಲ್ಲೂ ಅವಕಾಶವಿದೆ.

ಮಾನ್ಯತೆಯನ್ನೂ ರದ್ದುಪಡಿಸಬಹುದು. ವಿದ್ಯಾರ್ಥಿಗಳಿಗೆ ತೊಂದರೆ ಆಗಲಿದೆ ಎಂಬ ಕಾರಣದಿಂದ ಇಂಥ ಕಠಿಣ ಕ್ರಮಗಳಿಗೆ ಮುಂದಾಗುತ್ತಿಲ್ಲ. ಈ ಮೃದು ಧೋರಣೆಯನ್ನು ಶಾಲೆಗಳು ದುರುಪಯೋಗ ಪಡಿಸಿಕೊಳ್ಳುತ್ತಿವೆ ಎಂದು ಮೂಲಗಳು ಆರೋಪಿಸಿವೆ.

ಶಾಲೆಗಳು ಡೊನೇಷನ್ ಕೇಳಿದರೆ ಅಥವಾ ಹೆಚ್ಚಿನ ಶುಲ್ಕ ವಸೂಲು ಮಾಡಿದರೆ ವಿದ್ಯಾರ್ಥಿ ಪೋಷಕರು ಲಿಖಿತ ದೂರು ಸಲ್ಲಿಸಬಹುದು. ಮೂಲಸೌಲಭ್ಯಗಳ ಕೊರತೆ ಮತ್ತಿತರ ವೇಳೆ ಶಿಕ್ಷಣ ಅಧಿಕಾರಿಗಳು, ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತಿ ಅಧಿಕಾರಿಗಳೂ ಒಳಗೊಂಡಂತೆ ಯಾರೂ ಬೇಕಾದರೂ ದೂರು ಕೊಡಬಹುದು.

ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್, ಮೊದಲ ದರ್ಜೆ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಗಳು ದೂರಿನ ವಿಚಾರಣೆ ನಡೆಸಲಿವೆ. ಅಷ್ಟೇ ಅಲ್ಲದೆ, `ಶಿಕ್ಷಣ ನ್ಯಾಯಮಂಡಳಿ` ಸ್ಥಾಪನೆಗೂ ಮಸೂದೆಯಲ್ಲಿ ಅವಕಾಶ ಇರುತ್ತದೆ.

prajavani Front Page 27.02.2012

No comments:

Post a Comment