Friday, March 30, 2012

ಪ್ರಶ್ನೆ ಪತ್ರಿಕೆ ಬಯಲು: ಆಘಾತದಿಂದ ಪರೀಕ್ಷೆ ಬರೆಯದ ವಿದ್ಯಾರ್ಥಿ

ತುರುವೇಕೆರೆ: ಪಿಯುಸಿ ವಿಜ್ಞಾನ ವಿಷಯದ ಪ್ರಶ್ನೆಪತ್ರಿಕೆ ಬಹಿರಂಗಗೊಂಡ ಹಿನ್ನೆಲೆಯಲ್ಲಿ ಆಘಾತಕ್ಕೆ ಒಳಗಾದ ಸರ್ಕಾರಿ ಕಿರಿಯ ಕಾಲೇಜು ವಿದ್ಯಾರ್ಥಿಯೊಬ್ಬ ಮಾನಸಿಕ ಸ್ಥಿಮಿತ ಕಳೆದುಕೊಂಡು ಇತರೆ ವಿಷಯಗಳ ಪರೀಕ್ಷೆಗೆ ಹಾಜರಾಗದ ಘಟನೆ ನಡೆದಿದೆ.

ಹಲಿಕೆರೆ ಸಮೀಪದ ಬೀದಿಗಾನಹಳ್ಳಿ ಬಿ.ಜೆ.ನಂದೀಶ್ ಪ್ರತಿಭಾವಂತ ವಿದ್ಯಾರ್ಥಿ. ಎಸ್‌ಎಲ್‌ಎಲ್‌ಸಿ ಪರೀಕ್ಷೆಯಲ್ಲಿ 474 ಅಂಕ ಗಳಿಸಿದ್ದ. ಸರ್ಕಾರಿ ಪಿಯು ಕಾಲೇಜಿನಲ್ಲಿ ವಿಜ್ಞಾನ ವಿಷಯ ಆಯ್ಕೆ ಮಾಡಿಕೊಂಡಿದ್ದ. ಜೀವಶಾಸ್ತ್ರ ವಿಷಯದ ಪರೀಕ್ಷೆಗೆ ಹಾಜರಾಗಿದ್ದ.

ಆದರೆ ಗಣಿತಶಾಸ್ತ್ರ ಪತ್ರಿಕೆ ಬಹಿರಂಗಗೊಂಡಿದೆ ಎಂಬ ಸುದ್ದಿ ಕೇಳಿ ಆಘಾತಕ್ಕೊಳಗಾದ. ನಂತರ ಭೌತಶಾಸ್ತ್ರ ಪ್ರಶ್ನೆಪತ್ರಿಕೆಯೂ ಸೋರಿಕೆಯಾಗಿದೆ ಎಂದು ಗೊತ್ತಾದಾಗ ತೀವ್ರ ಖಿನ್ನತೆಗೊಳಗಾಗಿ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾನೆ ಎಂದು ಅವನ ಸಹಪಾಠಿಗಳು ತಿಳಿಸಿದ್ದಾರೆ.

ಜೀವಶಾಸ್ತ್ರ ವಿಷಯ ಬಿಟ್ಟರೆ ಬೇರೆ ಯಾವ ವಿಷಯದ ಪರೀಕ್ಷೆಗೂ ಹಾಜರಾಗಿಲ್ಲ. ಗುರುವಾರ ನಡೆದ ಆಂಗ್ಲಭಾಷಾ ಪರೀಕ್ಷೆಗೂ ಹಾಜರಾಗಿಲ್ಲ ಎಂದು ಕಾಲೇಜು ಪ್ರಭಾರ ಪ್ರಾಂಶುಪಾಲ ಅಲ್ಲಮಪ್ರಭು, ಭೌತಶಾಸ್ತ್ರ ಉಪನ್ಯಾಸಕ ನಟರಾಜ್ ಸ್ಪಷ್ಟಪಡಿಸಿದ್ದಾರೆ.ನಂದೀಶ್ ಯಾರೊಂದಿಗೂ ಸರಿಯಾಗಿ ಮಾತಾಡುತ್ತಿಲ್ಲ. ಇಡೀ ದಿನ ಪುಸ್ತಕ ಹಿಡಿದು ಕೂತಿರುತ್ತಾನೆ. ಮನೆಯವರು, ಸ್ನೇಹಿತರು ಮನವೊಲಿಸಿದರೂ ಪರೀಕ್ಷೆಗೆ ಹಾಜರಾಗಲು ನಿರಾಕರಿಸಿದ್ದಾರೆ.

ಪ್ರಶ್ನೆ ಪತ್ರಿಕೆ ಬಯಲು: ಆಘಾತದಿಂದ ಪರೀಕ್ಷೆ ಬರೆಯದ ವಿದ್ಯಾರ್ಥಿ

No comments:

Post a Comment