ಬೆಂಗಳೂರು : ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಸೋಮವಾರ ವಿಧಾನಮಂಡಲದ ಉಭಯ ಸದನಗಳಲ್ಲಿ ಬಲವಾಗಿ ಪ್ರತಿಧ್ವನಿಸಿ ಪ್ರತಿಪಕ್ಷಗಳು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡವು.
ಈ ಪ್ರಕರಣದ ಬಗ್ಗೆ ಸಿಐಡಿಯಿಂದ ನಿಷ್ಪಕ್ಷಪಾತವಾಗಿ ತನಿಖೆ ನಡೆಸಲು ಸಾಧ್ಯವಿಲ್ಲ. ಸಿಬಿಐ ತನಿಖೆಗೆ ವಹಿಸಬೇಕು ಎಂದು ವಿಧಾನಸಭೆಯಲ್ಲಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದರು. ಕೊನೆಗೆ ಸಿಬಿಐ ತನಿಖೆಗೆ ಒಪ್ಪದ ಸರ್ಕಾರದ ನಿಲವು ಪ್ರತಿಭಟಿಸಿ ಕಾಂಗ್ರೆಸ್ ಸದಸ್ಯರು ಸಭಾತ್ಯಾಗವನ್ನೂ ನಡೆಸಿದರು.
ಉಭಯ ಸದನಗಳಲ್ಲೂ ಪ್ರತಿಪಕ್ಷಗಳ ಸದಸ್ಯರ ಆಗ್ರಹಕ್ಕೆ ಉತ್ತರಿಸಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ, ಈ ಪ್ರಕರಣದ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು.
ಪ್ರಶ್ನೆ ಪತ್ರಿಕೆ ಬಯಲು ಮಾಡಿದ್ದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಪ್ರಕರಣವನ್ನು ಈಗಾಗಲೇ ಸಿಐಡಿ ತನಿಖೆಗೆ ವಹಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಿದ್ದು, ಸರ್ಕಾರಕ್ಕೂ ಆ ಬಗ್ಗೆ ಬಹಳ ನೋವಾಗಿದೆ. ಆದರೆ, ಈ ಜಾಲದ ಹಿಂದೆ ಎಷ್ಟೇ ಪ್ರಭಾವ ವ್ಯಕ್ತಿಗಳಿದ್ದರೂ, ಯಾವುದೇ ಒತ್ತಡಕ್ಕೆ ಮಣಿಯದೆ ಶಿಕ್ಷೆಗೆ ಒಳಪಡಿಸಲಾಗುವುದು ಎಂದು ಹೇಳಿದರು.
ಸ್ಥಳೀಯ ಅಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ ಈಗಾಗಲೇ ಕೆಲವರ ವಿರುದ್ಧ ಕ್ರಮ ಜರುಗಿಸಲಾಗಿದೆ. ಯಾವುದೇ ಕಾರಣಕ್ಕೂ ನಿರಪರಾಧಿಗಳಿಗೆ ತೊಂದರೆ ಉಂಟುಮಾಡುವುದಿಲ್ಲ. ಒಂದುವೇಳೆ ಅಂಥ ಗೊಂದಲ ಉಂಟಾಗಿದ್ದರೆ ತನಿಖೆ ಬಳಿಕ ಅದನ್ನು ಸರಿಪಡಿಸಲಾಗುವುದು. ಇಲಾಖೆ ಅಧಿಕಾರಿಗಳು, ಪ್ರಶ್ನೆ ಪತ್ರಿಕೆ ಮುದ್ರಕರು, ವಿತರಕರು ಸೇರಿದಂತೆ ಎಲ್ಲ ಹಂತಗಳಲ್ಲಿಯೂ ಮಾಹಿತಿ ಒದಗಿಸುವ ಮೂಲಕ ತನಿಖೆಗೆ ಪೂರ್ಣ ಸಹಕಾರ ನೀಡಲಾಗುತ್ತಿದೆ. ಮಕ್ಕಳ ಭವಿಷ್ಯದ ಮೇಲೆ ಚೆಲ್ಲಾಟವಾಡುವ ದುಷ್ಟಶಕ್ತಿಗಳನ್ನು ಸರ್ಕಾರ ಸುಮ್ಮನೆ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಪಿಯು ಆಯುಕ್ತರ ಎತ್ತಂಗಡಿ ಇಲ್ಲ
ಈ ಪ್ರಕರಣ ಸಂಬಂಧ ಪದವಿ ಪೂರ್ವ ಶಿಕ್ಷಣ ಇಲಾಖೆ ಆಯುಕ್ತೆ ರಶ್ಮಿ ವಿ. ಮಹೇಶ್ ಅವರನ್ನು ಎತ್ತಂಗಡಿ ಮಾಡುವ ಬಗ್ಗೆ ಸುದ್ದಿ ಹಬ್ಬಿಸಲಾಗುತ್ತಿದೆ. ಆದರೆ, ಸರ್ಕಾರ ಯಾವುದೇ ಕಾರಣಕ್ಕೂ ಅವರನ್ನು ವರ್ಗಾವಣೆ ಮಾಡುವುದಿಲ್ಲ. ಅವರು ತುಂಬಾ ದಕ್ಷ ಅಧಿಕಾರಿ. ಇಲಾಖೆಯಲ್ಲಿನ ಇಂಥ ದಕ್ಷ ಅಧಿಕಾರಿಗಳಿಗೆ ಮುಕ್ತವಾಗಿ ಕೆಲಸ ಮಾಡುವಲ್ಲಿ ಸೂಕ್ತ ಸಹಕಾರ ಮತ್ತು ರಕ್ಷಣೆ ಒದಗಿಸಲಾಗುವುದು ಎಂದು ಕಾಗೇರಿ ತಿಳಿಸಿದರು.
ಮೌಲ್ಯ ಮಾಪನಕ್ಕೆ ಬಿಗಿ ಭದ್ರತೆ
ಈ ಬಾರಿ ಪಿಯುಸಿ ಮತ್ತು ಎಸ್ಎಲ್ಸಿ ಉತ್ತರ ಪತ್ರಿಕೆಗಳ ಮೌಲ್ಯ ಮಾಪನಕ್ಕೆ ಬಿಗಿ ಭದ್ರತೆ ಒದಗಿಸಲಾಗುವುದು. ಯಾವುದೇ ಕಾರಣಕ್ಕೂ ಮೌಲ್ಯ ಮಾಪನ ಕೇಂದ್ರಗಳಿಗೆ ಅನಗತ್ಯವಾಗಿ ಪ್ರವೇಶಿಸಲು ಯಾರಿಗೂ ಅವಕಾಶ ನೀಡುವುದಿಲ್ಲ. ಆ ಮೂಲಕ ಮೌಲ್ಯ ಮಾಪನದಲ್ಲಿ ಯಾವುದೇ ಲೋಪ ಆಗದಂತೆ ಎಚ್ಚರ ವಹಿಸಲಾಗುವುದು. ಜತೆಗೆ ಮುಂದಿನ ವರ್ಷದಿಂದ ಪ್ರಶ್ನೆ ಪತ್ರಿಕೆ ತಯಾರಿಕೆ ಮತ್ತು ವಿತರಣೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸುವ ಮೂಲಕ ಹೆಚ್ಚಿನ ಗೌಪ್ಯತೆ ಕಾಪಾಡಲಾಗುವುದು ಎಂದರು.
ಅಮಾಯಕರಿಗೆ ಶಿಕ್ಷೆ ಬೇಡ
ಪ್ರಶ್ನೆ ಪತ್ರಿಕೆ ಸೋರಿಕೆ ಬಗ್ಗೆ ಇದಕ್ಕೂ ಮೊದಲು ಮಾತನಾಡಿದ ಪ್ರತಿಪಕ್ಷದ ಸದಸ್ಯರು, ಈ ಪ್ರಕರಣದಲ್ಲಿ ಅಮಾಯಕರನ್ನು ಶಿಕ್ಷೆಗೆ ಗುರಿಪಡಿಸಲಾಗುತ್ತಿದೆ. ಇದು ಸರಿಯಲ್ಲ. ಪ್ರಶ್ನೆ ಪತ್ರಿಕೆ ಸೋರಿಕೆ ಹಿಂದೆ ಟ್ಯೂಷನ್ ಮಾಫಿಯಾ ಕೈವಾಡವಿದೆ. ಹೀಗಾಗಿ, ಟ್ಯೂಷನ್ ಹಾವಳಿ ಕಡಿವಾಣ ಹಾಕಿ ಈ ಜಾಲದ ಹಿಂದೆ ಹಿರುವ ನಿಜವಾದ ಅಪರಾಧಿಗಳಿಗೆ ಶಿಕ್ಷೆಯಾಗಬೇಕು. ಜತೆಗೆ ಸಿಐಡಿ ಪೊಲೀಸರಿಗೆ ವಹಿಸಿದ್ದರೂ ನಿಷ್ಪಕ್ಷಪಾತವಾದ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.
ನಾನೇ ತನಿಖೆ ಮಾಡುತ್ತೇನೆ
'ಸಿಐಡಿಯಲ್ಲಿ ಕೆಲಸಕ್ಕೆ ಬಾರದ ಪೊಲೀಸ್ ಅಧಿಕಾರಿಗಳಿದ್ದಾರೆ. ಇಂಥವರಿಂದ ಪ್ರಶ್ನೆ ಪತ್ರಿಕೆ ಬಯಲು ಪ್ರಕರಣದ ನ್ಯಾಯ ಸಮ್ಮತ ತನಿಖೆ ಆಗುವುದಿಲ್ಲ. ಹೀಗಾಗಿ, ಸಿಐಡಿಗೆ ಕೊಡುವ ಬದಲು ನನಗೇ ಕೊಡಿ. ಜತೆಗೆ ನಾಲ್ಕೈದು ತನಿಖಾಧಿಕಾರಿಗಳನ್ನು ನೀಡಿ. ನಾನೇ ತಪ್ಪಿತಸ್ಥರನ್ನು ಪತ್ತೆ ಮಾಡುತ್ತೇನೆ'. ಹೀಗೆಂದು ಜೆಡಿಎಸ್ ಸದಸ್ಯ ಹಾಗೂ ನಿವೃತ್ತ ಪೊಲೀಸ್ ಅಧಿಕಾರಿಯೂ ಆದ ಅಬ್ದುಲ್ ಅಜೀಂ ವಿಧಾನಪರಿಷತ್ತಿನಲ್ಲಿ ಹೇಳುವ ಮೂಲಕ ಸದನದಲ್ಲಿ ಗಮನಸೆಳೆದರು
Improper maintenance of records and incomplete computerisation contributed to the delay in disposal of cases in the Pre-University Department
Click on this to visit Department of Technical EducationPublic Instruction
Tuesday, March 27, 2012
ಪಿಯು ಆಯುಕ್ತರ ಎತ್ತಂಗಡಿ ಇಲ್ಲ-ಉದಯವಾಣಿ ವರದಿ
Udayavani | Mar 26, 2012
Subscribe to:
Post Comments (Atom)
No comments:
Post a Comment