Saturday, April 28, 2012

ಪ್ರಶ್ನೆ ಪತ್ರಿಕೆ ಸೋರಿಕೆ: ಶಶಿಕಲಾಗೆ ಹೈಕೋರ್ಟ್ ಜಾಮೀನು ನಕಾರ-ಪ್ರಜಾವಾಣಿ ವರದಿ

ಬೆಂಗಳೂರು: `ವಿದ್ಯಾರ್ಥಿಗಳು ಕಷ್ಟಪಟ್ಟು ರಾತ್ರಿಯೆಲ್ಲ ಕುಳಿತು ಓದಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದರೆ, ನೀವು ಪ್ರಶ್ನೆ ಪತ್ರಿಕೆಯನ್ನು ಸೋರಿಕೆ ಮಾಡಿ ಅವರ ಭವಿಷ್ಯಕ್ಕೆ ಮಾರಕವಾಗುವ ಕೆಲಸ ಮಾಡುತ್ತಿದ್ದೀರಾ, ಅವರ ಜೀವನದ ಜೊತೆ ಚೆಲ್ಲಾಟ ಆಡುತ್ತೀರಾ, ಇದು ಸಮಾಜಘಾತುಕ ಕೃತ್ಯ. ಇಂಥವರಿಗೆ ಜಾಮೀನು ನೀಡಲು ಸಾಧ್ಯವಿಲ್ಲ` ಎಂದು ಹೈಕೋರ್ಟ್ ಆರೋಪಿಗಳನ್ನು ಶುಕ್ರವಾರ ತೀವ್ರ ತರಾಟೆಗೆ ತೆಗೆದುಕೊಂಡಿತು.

ಈಚೆಗೆ ನಡೆದ ದ್ವಿತೀಯ ಪಿಯುಸಿ ಪರೀಕ್ಷೆ ಸಂದರ್ಭದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಮಾಡಿರುವ ಆರೋಪಿಗಳಲ್ಲಿ ಒಬ್ಬರಾದ ಶಶಿಕಲಾ ಎನ್ನುವವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಚ್.ಎಸ್.ಕೆಂಪಣ್ಣ ನಡೆಸಿದರು.

`ಪ್ರಶ್ನೆಪತ್ರಿಕೆ ಬಹಿರಂಗವು ಬಹು ದೊಡ್ಡ ಅಪರಾಧವಲ್ಲದೆ, ಪ್ರತಿಭಾನ್ವಿತ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕ. ಇಂತಹ ಆರೋಪದಲ್ಲಿ ಸಿಲುಕಿದ್ದರೂ ಜಾಮೀನು ಕೋರಿ ಬಂದಿರುವುದು ದುರದೃಷ್ಟಕರ` ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟರು.

ಪತ್ರಿಕೆ ಸೋರಿಕೆ ಪ್ರಕರಣದ ತನಿಖೆ ನಡೆಸಿದ್ದ ಸಿಐಡಿ ಪೊಲೀಸರು, ಅನೇಕ ಆರೋಪಿಗಳನ್ನು ಬಂಧಿಸಿದ್ದಾರೆ. ಶಶಿಕಲಾ ನಾಪತ್ತೆಯಾಗಿದ್ದರು.ತಮ್ಮನ್ನು ಬಂಧಿಸುವ ಸಾಧ್ಯತೆ ಇದೆ ಎಂಬ ಭೀತಿಯಿಂದ ಅವರು ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ ಈ ಅರ್ಜಿಯನ್ನು ಮಾನ್ಯ ಮಾಡಲು ನಿರಾಕರಿಸಿದ ನ್ಯಾಯಮೂರ್ತಿಗಳು, `ಅರ್ಜಿಯನ್ನು ಹಿಂದಕ್ಕೆ ಪಡೆದುಕೊಳ್ಳಿ, ಇಲ್ಲದೇ ಹೋದರೆ  ಅರ್ಜಿಯನ್ನು ವಜಾ ಮಾಡಲಾಗುವುದು` ಎಂದು ಅರ್ಜಿದಾರರ ಪರ ವಕೀಲರಿಗೆ ಹೇಳಿದರು. ವಕೀಲರು ಅರ್ಜಿ ಹಿಂದಕ್ಕೆ ಪಡೆದರು. 

ಪರೀಕ್ಷೆ ಬರೆಯಲು ಆದೇಶ
ಸರ್ವ ಶಿಕ್ಷಣ ಅಭಿಯಾನದ ವತಿಯಿಂದ ಮೇ ತಿಂಗಳಿನಲ್ಲಿ ನಡೆಯುವ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಹುದ್ದೆಯ ಪರೀಕ್ಷೆಗೆ ಹಾಜರಾಗುವಂತೆ 156 ಅರ್ಜಿದಾರ ಶಿಕ್ಷಕರಿಗೆ ಹೈಕೋರ್ಟ್ ಶುಕ್ರವಾರ ಆದೇಶಿಸಿದೆ. ಈ ಎಲ್ಲ ಶಿಕ್ಷಕರನ್ನು ಸಂಪನ್ಮೂಲ ಸಮನ್ವಯಾಧಿಕಾರಿ ಹುದ್ದೆಯಿಂದ ಹಿಂದಕ್ಕೆ ಪಡೆದ ಆದೇಶಕ್ಕೆ ಇದ್ದ ತಡೆಯಾಜ್ಞೆಯನ್ನು ನ್ಯಾಯಮೂರ್ತಿ ಹುಲುವಾಡಿ ಜಿ. ರಮೇಶ್ ನೇತೃತ್ವದ ಪೀಠ, ತೆರವುಗೊಳಿಸಿದೆ.

ಎಚ್.ಮಲ್ಲಿಕಾರ್ಜುನಯ್ಯ ಹಾಗೂ ಇತರರಿಗೆ 2008ರಲ್ಲಿ ಈ ಹುದ್ದೆಗೆ ನೇಮಕ ಮಾಡಲಾಗಿತ್ತು. ಆದರೆ 2011ರ ಮಾರ್ಚ್ 9ರಂದು ನೇಮಕ ಹಿಂದಕ್ಕೆ ಪಡೆದು ಸರ್ಕಾರ ಆದೇಶಿಸಿತ್ತು. ಈ ಆದೇಶವನ್ನು ಇವರೆಲ್ಲ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಇದರ ವಿಚಾರಣೆ ನಡೆಸಿದ್ದ ಹೈಕೋರ್ಟ್, ಸರ್ಕಾರದ ಆದೇಶಕ್ಕೆ ತಡೆ ನೀಡಿ ಯಥಾಸ್ಥಿತಿ ಕಾಯ್ದುಕೊಳ್ಳಲು  2011ರ ಡಿ. 23ರಂದು ಸೂಚಿಸಿತ್ತು.

ಈ ತಡೆಯಾಜ್ಞೆಯಿಂದ ತೊಂದರೆ ಆಗುತ್ತಿದೆ ಎಂದು ತಿಳಿಸಿ, ಅದನ್ನು ತೆರವು ಮಾಡುವಂತೆ ಸರ್ವ ಶಿಕ್ಷಣ ಅಭಿಯಾನ ಸಲ್ಲಿಸಿದ್ದ ಅರ್ಜಿಯನ್ನು ಪೀಠ ಮಾನ್ಯ ಮಾಡಿದೆ. ಮೇ ತಿಂಗಳಿನಲ್ಲಿ ಪರೀಕ್ಷೆ ನಡೆಯಲಿರುವ ಹಿನ್ನೆಲೆಯಲ್ಲಿ ಈ ಎಲ್ಲ ಅರ್ಜಿದಾರರು ಪರೀಕ್ಷೆ ಬರೆದು ಹುದ್ದೆಯಲ್ಲಿ ಮುಂದುವರಿಯಬಹುದು ಎಂದು ಕೋರ್ಟ್ ಹೇಳಿದೆ. 

ತಾರಾ ಹೋಟೆಲ್: ನೋಟಿಸ್
ದೇವನಹಳ್ಳಿ ಬಳಿ ಇರುವ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ನಿರ್ಮಾಣವಾಗುತ್ತಿರುವ ತಾರಾ ಹೋಟೆಲ್ ಕಟ್ಟಡ ನೆಲಸಮಕ್ಕೆ ಕೋರಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.

ವಕೀಲ ಜಿ.ಆರ್.ಮೋಹನ್ ಸಲ್ಲಿಸಿರುವ ಈ ಅರ್ಜಿಗೆ ಸಂಬಂಧಿಸಿದಂತೆ ಕೇಂದ್ರ, ರಾಜ್ಯ ಸರ್ಕಾರ, ವಿಮಾನ ನಿಲ್ದಾಣ ಪ್ರಾಧಿಕಾರ ಸೇರಿದಂತೆ ಇತರ ಪ್ರತಿವಾದಿಗಳಿಗೆ ನ್ಯಾಯಮೂರ್ತಿ ಹುಲುವಾಡಿ ಜಿ.ರಮೇಶ್ ನೇತೃತ್ವದ ವಿಭಾಗೀಯ ಪೀಠ ನೋಟಿಸ್ ಜಾರಿಗೆ ಆದೇಶಿಸಿದೆ. 

`ವಿಮಾನ ನಿಲ್ದಾಣದ ಅರ್ಧ ಕಿ.ಮೀ. ದೂರದಲ್ಲಿ ಈ ಹೋಟೆಲ್ ನಿರ್ಮಾಣ ಆಗುತ್ತಿದೆ. ಇದರಿಂದ ಸುರಕ್ಷತೆ ಧಕ್ಕೆ ಬರುವ ಸಾಧ್ಯತೆ ಇದೆ. ವಿಮಾನ ನಿಲ್ದಾಣಕ್ಕೆ ಪ್ರತಿದಿನ ಗಣ್ಯಾತಿಗಣ್ಯ ವ್ಯಕ್ತಿಗಳು ಬರುತ್ತಾರೆ. ಅವರನ್ನು ಗುರಿಯಾಗಿಟ್ಟುಕೊಂಡು ವಿಧ್ವಂಸಕ ಕೃತ್ಯ ನಡೆಸಲು ಹೋಟೆಲ್ ಅನುಕೂಲ ವಾತಾವರಣ ಕಲ್ಪಿಸಲಿದೆ. 

ಆದುದರಿಂದ ಈ ರೀತಿ ನಿಲ್ದಾಣದ ಸಮೀಪ ತಾರಾ ಹೋಟೆಲ್ ನಿರ್ಮಾಣ ಕಾನೂನುಬಾಹಿರ` ಎನ್ನುವುದು ಅವರ ಆರೋಪ. ವಿಚಾರಣೆಯನ್ನು ಮುಂದೂಡಲಾಗಿದೆ.


ಪ್ರಜಾವಾಣಿ ವರದಿ 

No comments:

Post a Comment