ಬೆಂಗಳೂರು: ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಬಯಲು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಪೊಲೀಸರು ಹತ್ತು ಜನ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಿಐಡಿ ಡಿಜಿಪಿ ರೂಪಕ್ಕುಮಾರ್ ದತ್ತ ತಿಳಿಸಿದರು.
ಬಂಧಿತರನ್ನು ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ಬಿಸಿಆರ್ ಕಚೇರಿಯ ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕ ಮುನಾವರ್ ಬಾಷಾ (44), ಕಡೂರಿನ ಉಪ ಖಜಾನೆಯ ದ್ವಿತೀಯ ದರ್ಜೆ ಸಹಾಯಕ ಎಚ್.ಎಸ್.ಸುನೀಲ್ ಕುಮಾರ್ (34), ಬೆಂಗಳೂರಿನ ಖಾಸಗಿ ಕಾಲೇಜಿನ ಉಪನ್ಯಾಸಕ ಸಿ.ಪಿ.ರಮೇಶ್ (42), ದೇವನಹಳ್ಳಿ ತಾಲ್ಲೂಕಿನ ದೊಡ್ಡ ಕುರುಬರಹಳ್ಳಿಯ ಸಹಾಯಕ ಶಿಕ್ಷಕ ಟಿ.ಸೊಣ್ಣಪ್ಪ (37), ಚಿತ್ರದುರ್ಗ ಜಿಲ್ಲೆಯ ತಾಳಿಕಟ್ಟೆ ಕಾವಲಿನ ಟಿ.ರವಿಕುಮಾರ್ (28), ಚಿಕ್ಕಮಗಳೂರು ಜಿಲ್ಲೆಯ ಶಶಿಧರ್ (28) ಹಾಗೂ ಜಿ.ಪ್ರಸಾದ್ (49) ಮತ್ತು ಭದ್ರಾವತಿಯ ಅನಿಲ್ ರಾಹುತ್ (27) ಎಂದು ಗುರುತಿಸಲಾಗಿದೆ.
`ಮಾರ್ಚ್ 19 ರಂದು ನಡೆದ ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಬಯಲು ಪ್ರಕರಣವನ್ನು ಸರ್ಕಾರವು ಸಿಐಡಿಗೆ ವರ್ಗಾಯಿಸಿತ್ತು. ಪ್ರಕರಣದ ತನಿಖೆಗಾಗಿ 15 ಜನ ಸಿಐಡಿ ಅಧಿಕಾರಿಗಳ ನಾಲ್ಕು ತಂಡಗಳನ್ನು ರಚಿಸಲಾಗಿತ್ತು. ತನಿಖೆ ನಡೆಸಿದ ಸಿಐಡಿ ಅಧಿಕಾರಿಗಳು ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಚಿಕ್ಕಮಗಳೂರಿನಲ್ಲಿ ವಿಚಾರಣೆ ನಡೆಸಿ ಸೋಮವಾರ (ಏ. 02) ಒಂದೇ ದಿನ ಎಂಟು ಜನ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರು ಹಣ ಮಾಡುವ ಉದ್ದೇಶದಿಂದ ಪ್ರಶ್ನೆ ಪತ್ರಿಕೆಗಳನ್ನು ಬಯಲು ಮಾಡಿರುವ ವಿಚಾರ ತಿಳಿದುಬಂದಿದೆ. ವಿಚಾರಣೆ ಪ್ರಗತಿಯಲ್ಲಿದ್ದು, ಇನ್ನುಳಿದ ಪ್ರಮುಖ ಆರೋಪಿಗಳಾದ ನವೀನ್ ಕುಮಾರ್ ಹಾಗೂ ಶಶಿಕಲಾ ಅವರ ಬಂಧನಕ್ಕೆ ತನಿಖೆಯನ್ನು ತೀವ್ರಗೊಳಿಸಲಾಗಿದೆ` ಎಂದು ರೂಪಕ್ಕುಮಾರ್ ದತ್ತ ತಿಳಿಸಿದರು.
`ಎಂಟು ಜನ ಆರೋಪಿಗಳ ಜೊತೆಗೆ ಪ್ರಕರಣದಲ್ಲಿ ಭಾಗಿಗಳಾಗಿದ್ದ ಬೆಂಗಳೂರಿನ ವಕೀಲ ಎಸ್.ಯೋಗೀಶ್ವರ್ (36) ಅವರನ್ನು ಸಿಐಡಿ ಪೊಲೀಸರು ಹಾಗೂ ಚಿಕ್ಕಮಗಳೂರಿನ ಕುಡ್ಲೂರಿನ ಸಹಾಯಕ ಶಿಕ್ಷಕ ಸಿದ್ಧರಾಮಯ್ಯ (44) ಎಂಬುವರನ್ನು ಸ್ಥಳೀಯ ಅಜ್ಜಂಪುರ ಪೊಲೀಸರು ಈ ಹಿಂದೆಯೇ ಬಂಧಿಸಿದ್ದರು. ಮಾರ್ಚ್ 14 ರಂದು ಪ್ರಶ್ನೆ ಪತ್ರಿಕೆ ಬಯಲುಗೊಂಡಿದ್ದು, ಪ್ರಶ್ನೆ ಪತ್ರಿಕೆಯನ್ನು ಫ್ಯಾಕ್ಸ್, ಇಮೇಲ್ ಹಾಗೂ ಕೊರಿಯರ್ ಮೂಲಕ ವಿತರಣೆ ಮಾಡಲಾಗಿದೆ ಎಂದು ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ` ಎಂದು ಹೇಳಿದರು.
`ಕಡೂರಿನ ಉಪ ಖಜಾನೆಯ ದ್ವಿತೀಯ ದರ್ಜೆ ಸಹಾಯಕ ಸುನೀಲ್ ಕುಮಾರ್ ಅವರ ಬಳಿಯೇ ಖಜಾನೆಯ ಕೀಲಿ ಕೈ ಇರುತ್ತಿತ್ತು. ಸುನೀಲ್ ಕುಮಾರ್ ಅವರು ಬಿಆರ್ಸಿ ಕಚೇರಿಯ ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕ ಮುನಾವರ್ ಬಾಷಾ ಅವರೊಂದಿಗೆ ಸೇರಿ ಮೊದಲು ಜೀವಶಾಸ್ತ್ರ ಪರೀಕ್ಷೆಯ ಹಿಂದಿನ ದಿನ ಸಂಜೆ ಉಪ ಖಜಾನೆಯ ಸ್ಟ್ರಾಂಗ್ ರೂಂನಲ್ಲಿ ಬಂಡಲ್ನಿಂದ ಪ್ರಶ್ನೆ ಪತ್ರಿಕೆಯನ್ನು ಹೊರತೆಗೆದು ಅದರ ಜೆರಾಕ್ಸ್ ಪ್ರತಿಯನ್ನು ಖಜಾನೆಯಿಂದ ಹೊರ ಸಾಗಿಸಿದ್ದಾರೆ. ಇದೇ ರೀತಿ ಭೌತಶಾಸ್ತ್ರ ಹಾಗೂ ಗಣಿತದ ಪ್ರಶ್ನೆ ಪತ್ರಿಕೆಗಳ ನಕಲನ್ನೂ ಪಡೆದುಕೊಂಡಿದ್ದಾರೆ. ಕನ್ನಡ ಹಾಗೂ ಇನ್ನಿತರ ಪತ್ರಿಕೆಗಳ ಬಯಲಿಗೂ ಯೋಜನೆ ಹಾಕಿಕೊಂಡಿದ್ದ ಆರೋಪಿಗಳು ಮಾಧ್ಯಮಗಳಲ್ಲಿ ಈ ವಿಷಯ ಬಹಿರಂಗಗೊಳ್ಳುತ್ತಿದ್ದಂತೇ ಯೋಜನೆಯನ್ನು ಕೈ ಬಿಟ್ಟಿದ್ದಾರೆ. ಪ್ರಕರಣದಲ್ಲಿ ಕಡೂರಿನ ಉಪ ಖಜಾನಾಧಿಕಾರಿ ಚಂದ್ರಶೇಖರ್ ಅವರ ಪಾತ್ರದ ಬಗ್ಗೆ ತನಿಖೆಯ ನಂತರವಷ್ಟೇ ಹೆಚ್ಚಿನ ಮಾಹಿತಿ ತಿಳಿಯಲಿದೆ` ಎಂದರು.
`ಪ್ರಶ್ನೆ ಪತ್ರಿಕೆಗಳು ಹೇಗೆ ವಿತರಣೆಯಾಗಿವೆ ಹಾಗೂ ಅವು ವಿದ್ಯಾರ್ಥಿಗಳ ಕೈ ಸೇರಿದ್ದವೇ ಎಂಬ ಬಗ್ಗೆ ಹೆಚ್ಚಿನ ಮಾಹಿತಿಗಳಿಲ್ಲ. ಪ್ರಶ್ನೆ ಪತ್ರಿಕೆಯ ನಕಲಿಗಾಗಿ ಸುನೀಲ್ ಕುಮಾರ್ ಒಂದರಿಂದ ಒಂದೂವರೆ ಲಕ್ಷ ರೂಪಾಯಿಗಳನ್ನು ಪಡೆದಿದ್ದ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಈ ಜಾಲದಲ್ಲಿ ಇನ್ನೂ ಎಷ್ಟು ಜನ ಭಾಗಿಗಳಾಗಿದ್ದಾರೆ, ಎಷ್ಟು ಹಣದ ವಹಿವಾಟು ನಡೆದಿದೆ ಎಂಬುದು ಮುಂದಿನ ತನಿಖೆಯಿಂದ ತಿಳಿಯಲಿದೆ. ಪ್ರಶ್ನೆ ಪತ್ರಿಕೆ ಬಯಲಿನಲ್ಲಿ ಆರೋಪಿಗಳ ಕಾರ್ಯ ಯೋಜನೆಯನ್ನು ನೋಡಿದರೆ ಅವರು ಈ ಹಿಂದೆಯೂ ಇದೇ ಜಾಲದಲ್ಲಿ ಭಾಗಿಗಳಾಗಿರುವ ಸಾಧ್ಯತೆಗಳಿವೆ` ಎಂದು ಅವರು ಅನುಮಾನ ವ್ಯಕ್ತ ಪಡಿಸಿದರು.
`ಆರೋಪಿಗಳ ವಿರುದ್ಧ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆ 418, 381, 420 ಹಾಗೂ ಕರ್ನಾಟಕ ಶಿಕ್ಷಣ ಕಾಯ್ದೆ 1983 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಮಂಗಳವಾರ ತರೀಕೆರೆಯ ಜೆಎಂಎಫ್ಸಿ ನ್ಯಾಯಾಲಯಕ್ಕೆ ಆರೋಪಿಗಳನ್ನು ಹಾಜರು ಪಡಿಸಲಾಗುವುದು. ಪ್ರಕರಣದ ಸಂಬಂಧ ತನಿಖೆಯನ್ನು ತೀವ್ರಗೊಳಿಸಲಾಗಿದ್ದು, ಜಾಲದಲ್ಲಿ ಭಾಗಿಗಳಾಗಿರುವ ಇನ್ನಿತರ ಆರೋಪಿಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ` ಎಂದು ಹೇಳಿದರು.
ಸಿಐಡಿ ಎಡಿಜಿಪಿಗಳಾದ ಎನ್.ಎಸ್. ಮೇಘರಿಕ್, ಪ್ರೇಮ್ಶಂಕರ್ ಮೀನಾ, ಡಿಐಜಿ ಎಸ್.ಮುರುಗನ್ ಸೇರಿದಂತೆ ಇನ್ನಿತರ ಹಿರಿಯ ಸಿಐಡಿ ಅಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು. ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಬಯಲು ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಕೇಂದ್ರ ಅಪರಾಧ ವಿಭಾಗದ ಪೊಲೀಸರು ಅಶ್ವತ್ಥ್ ನಾರಾಯಣಗೌಡ, ಸುದರ್ಶನ್ ಹಾಗೂ ರಂಜಿತ್ ಎಂಬುವರನ್ನು ಬಂಧಿಸಿದ್ದರು.
No comments:
Post a Comment