Monday, May 28, 2012

ಸಿಇಟಿ ಮಾಹಿತಿಗೆ ಮುಗಿಬಿದ್ದ ವಿದ್ಯಾರ್ಥಿ ಸಮೂಹ; `ಜ್ಞಾನದೇಗುಲ' ಶಿಕ್ಷಣ ಮೇಳಕ್ಕೆ ತೆರೆ


ಬೆಂಗಳೂರು: `ಪ್ರಜಾವಾಣಿ` ಮತ್ತು `ಡೆಕ್ಕನ್ ಹೆರಾಲ್ಡ್` ಪತ್ರಿಕಾ ಸಮೂಹದ ಆಶ್ರಯದಲ್ಲಿ ನಗರದ ಅರಮನೆ ಮೈದಾನದ `ತ್ರಿಪುರ ವಾಸಿನಿ`ಯಲ್ಲಿ ಏರ್ಪಡಿಸಿದ್ದ `ಜ್ಞಾನ ದೇಗುಲ` ಶಿಕ್ಷಣ ಮೇಳದಲ್ಲಿ ಎರಡನೇ ದಿನವಾದ ಭಾನುವಾರವೂ ವಿದ್ಯಾರ್ಥಿಗಳು ಹಾಗೂ ಪೋಷಕರು ಸಿಇಟಿ ಮಾಹಿತಿಗಾಗಿ ಮುಗಿಬಿದ್ದರು. ಆ ಮೂಲಕ ಎರಡು ದಿನಗಳ `ಜ್ಞಾನ ದೇಗುಲ` ಶಿಕ್ಷಣ ಮೇಳಕ್ಕೆ ಅಂತಿಮ ತೆರೆ ಬಿದ್ದಿತು.

ಸುಮಾರು ಐದು ಸಾವಿರಕ್ಕೂ ಅಧಿಕ ಮಂದಿ ಶಿಕ್ಷಣ ಮೇಳದ ಲಾಭ ಪಡೆದರು. ಸಾವಿರಾರು ಮಂದಿ ಐದು ಗೋಷ್ಠಿಗಳ ಪ್ರಯೋಜನ ಪಡೆದರು. ಮಳಿಗೆಗಳ ಬಗ್ಗೆಯೂ ಮೆಚ್ಚುಗೆ ವ್ಯಕ್ತವಾಯಿತು.

`ಪ್ರಜಾವಾಣಿ` ಮತ್ತು `ಡೆಕ್ಕನ್ ಹೆರಾಲ್ಡ್` ಪತ್ರಿಕಾ ಸಮೂಹದ ಕಾಳಜಿ ಶ್ಲಾಘನೀಯ ಎಂದು ಮೇಳದಲ್ಲಿ ಪಾಲ್ಗೊಂಡವರು ಮೆಚ್ಚುಗೆ ವ್ಯಕ್ತಪಡಿಸಿದರು. ಸಿಇಟಿ ಆಯ್ಕೆ ಪ್ರಕ್ರಿಯೆಗೆ ಕೆಲವೇ ದಿನಗಳು ಉಳಿದಿರುವಾಗ ಸಿಇಟಿ ಬಗ್ಗೆ ಮಾಹಿತಿ ನೀಡಿರುವುದು ಸಕಾಲಿಕ ಎಂದು ಪೋಷಕರು ಸಂತಸ ವ್ಯಕ್ತಪಡಿಸಿದರು. ಸಿಇಟಿ ಗೋಷ್ಠಿ ಮುಗಿದ ಬಳಿಕವೂ ಸುಮಾರು ಹೊತ್ತು ಸಂಪನ್ಮೂಲ ವ್ಯಕ್ತಿಗಳಲ್ಲಿ ವಿದ್ಯಾರ್ಥಿಗಳು ಮಾಹಿತಿ ಪಡೆದುಕೊಂಡರು.

 `ನಿರ್ವಹಣಾ ಶಿಕ್ಷಣದಲ್ಲಿ ಅವಕಾಶಗಳು` ಕುರಿತು ಮಾತನಾಡಿದ ಶೇಷಾದ್ರಿಪುರಂ ಶಿಕ್ಷಣ ಸಮೂಹದ ಗೌರವ ಪ್ರಧಾನ ಕಾರ್ಯದರ್ಶಿ ಡಾ. ವೂಡೆ ಪಿ.ಕೃಷ್ಣ, `ಐವತ್ತು ವರ್ಷಗಳ ಹಿಂದೆ ನಿರ್ವಹಣಾ ಶಿಕ್ಷಣ ಕ್ಷೇತ್ರ ವಾಣಿಜ್ಯ ಶಿಕ್ಷಣದ ಭಾಗವಾಗಿತ್ತು. ಇದರ ಬಗ್ಗೆ ಜನರಿಗೆ ಹೆಚ್ಚು ಜಾಗೃತಿಯೂ ಇರಲಿಲ್ಲ. ಈಗ ದೇಶದಲ್ಲಿ 1250 `ಬಿ` ಸ್ಕೂಲ್‌ಗಳಿದ್ದು, 1.25 ಲಕ್ಷ ವಿದ್ಯಾರ್ಥಿಗಳು ಪ್ರತಿ ವರ್ಷ ಶಿಕ್ಷಣ ಪಡೆಯುತ್ತಿದ್ದಾರೆ. ಒಂದು ಲಕ್ಷ ಮಂದಿ ದೂರಶಿಕ್ಷಣ ಮೂಲಕ ಎಂಬಿಎ ಶಿಕ್ಷಣ ಪಡೆಯುತ್ತಿದ್ದಾರೆ` ಎಂದರು. 

`ನಿರ್ವಹಣಾ ಶಿಕ್ಷಣ ಜಾಗತಿಕ ಮನೋಭಾವದ ನಾಯಕರನ್ನು ರೂಪಿಸುತ್ತದೆ. ಶೇ 85ರಷ್ಟು ಕಂಪೆನಿಗಳು ಜಾಗತಿಕ ನಾಯಕರನ್ನು ಆಯ್ಕೆ ಮಾಡಿಕೊಳ್ಳಲು ಇಷ್ಟಪಡುತ್ತವೆ. ಎಂಬಿಎ ಪದವೀಧರರನ್ನು ನಾಯಕರನ್ನಾಗಿ ಪರಿವರ್ತಿಸುತ್ತದೆ` ಎಂದ ಬಣ್ಣಿಸಿದರು.

ಮೈಸೂರು ವಿಶ್ವವಿದ್ಯಾಲಯದ ಮಾಹಿತಿ ವಿಜ್ಞಾನದ ಅಂತರರಾಷ್ಟ್ರೀಯ ಶಾಲೆ ನಿರ್ದೇಶಕಿ ಪ್ರೊ. ಶಾಲಿನಿ ಅರಸ್, `ವ್ಯವಹಾರಿಕ ಕ್ಷೇತ್ರದಲ್ಲಿ ಹೊಸ ಅವಕಾಶ` ಕುರಿತು ಉಪನ್ಯಾಸ ನೀಡಿ, `ದಕ್ಷಿಣ ಭಾರತದ ಯುವಜನತೆ ಎಂಜಿನಿಯರಿಂಗ್ ಹಾಗೂ ವೈದ್ಯಕೀಯ ಶಿಕ್ಷಣ ಕಲಿತರೆ ಶ್ರೇಷ್ಠ ಹಾಗೂ ಅಲ್ಲಿ ಸಾಕಷ್ಟು ಉದ್ಯೋಗಾವಕಾಶ ಲಭ್ಯವಿದೆ ಎಂದು ಭಾವಿಸಿದ್ದಾರೆ. ಆದರೆ, ಉತ್ತರ ಭಾರತದಲ್ಲಿ ವಿದ್ಯಾರ್ಥಿಗಳು ಈ ಎರಡು ಕ್ಷೇತ್ರ ಹೊರತುಪಡಿಸಿ ಬೇರೆ ಬೇರೆ ಕ್ಷೇತ್ರಗಳಲ್ಲಿ ಕಲಿಕೆಗೆ ಹೆಚ್ಚು ಒತ್ತು ನೀಡುತ್ತಾರೆ` ಎಂದರು.

`ಆಧುನಿಕ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳಿಗೆ ಅವಕಾಶಗಳ ಬಾಗಿಲು ತೆರೆದಿದ್ದು, ಕೌಶಲ ಅಳವಡಿಸಿಕೊಂಡು ಯಶಸ್ಸು ಗಳಿಸಬೇಕು. ಯುವಜನತೆ ತಮಗೆ ಖುಷಿ ನೀಡುವಂತಹ ವೃತ್ತಿಯನ್ನು ಆಯ್ದುಕೊಳ್ಳಬೇಕು` ಎಂದು ಅವರು ಸಲಹೆ ನೀಡಿದರು.

`ಅನಿಮೇಶನ್, ಗೇಮಿಂಗ್ ಕ್ಷೇತ್ರದಲ್ಲಿ ಅವಕಾಶಗಳು` ಕುರಿತು ಉಪನ್ಯಾಸ ನೀಡಿದ ಬೆಂಗಳೂರು ಅನಿಮೇಷನ್ ಉದ್ಯಮ ಸಂಘಗಳ ಉಪಾಧ್ಯಕ್ಷ ಎಂ.ಆರ್.ಬಾಲಕೃಷ್ಣ, `ಅರ್ಧ ದಶಕದಿಂದ ಅನಿಮೇಷನ್ ಕ್ಷೇತ್ರದಲ್ಲಿ ವ್ಯಾಪಕ ಉದ್ಯೋಗಾವಕಾಶ ಸೃಷ್ಟಿಯಾಗಿದೆ` ಎಂದರು.

ಪದವಿಪೂರ್ವ ಶಿಕ್ಷಣ ಇಲಾಖೆಯ ನರಸಿಂಹಮೂರ್ತಿ ಸಿಇಟಿ ಬಗ್ಗೆ ಮಾಹಿತಿ ನೀಡಿದರು.
ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಆನ್‌ಲೈನ್ ವ್ಯವಸ್ಥೆ: ರಶ್ಮಿ
 `ವಿದ್ಯಾರ್ಥಿಗಳ ಅಲೆದಾಟ ತಪ್ಪಿಸಿ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಸಿಇಟಿ ಆಯ್ಕೆ ಪ್ರಕ್ರಿಯೆಯಲ್ಲಿ ಆನ್‌ಲೈನ್ ಜಾರಿಗೆ ತರಲಾಗಿದೆ` ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಆಯುಕ್ತರಾದ ವಿ.ರಶ್ಮಿ  ತಿಳಿಸಿದರು.

`ಸಿಇಟಿ ನಿಯಮಗಳು` ಕುರಿತು ಉಪನ್ಯಾಸ ನೀಡಿದ ಅವರು, `ವಿದ್ಯಾರ್ಥಿಗಳಿಗೆ ಗೊಂದಲ ಮೂಡಿದಾಗ ಇಲಾಖೆಯ ಜೊತೆಗೆ ಸಂವಹನ ನಡೆಸಿ ಸಂಶಯ ಪರಿಹರಿಸಿಕೊಳ್ಳಬಹುದು. ವೆಬ್‌ಸೈಟ್‌ಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದು. ಫೇಸ್ ಬುಕ್ ಮೂಲಕ ಇಲಾಖೆಯ ಅಧಿಕಾರಿಗಳ ಜೊತೆಗೆ ಸಂವಹನ ನಡೆಸಬಹುದು. ಕೈಪಿಡಿಯಲ್ಲಿ ಎಲ್ಲ ಮಾಹಿತಿಯೂ ಲಭ್ಯವಿದೆ` ಎಂದರು.

`ಕಳೆದ ವರ್ಷ ಕೆಲವು ವಿದ್ಯಾರ್ಥಿಗಳು ಹಾಗೂ ಪೋಷಕರು ಸಿಇಟಿ ಪ್ರಕ್ರಿಯೆ ವೇಳೆಗೆ 10ಕ್ಕೂ ಅಧಿಕ ಬಾರಿ ಅಲೆದಾಡಿದ ಉದಾಹರಣೆಗಳು ಇವೆ. ಈ ಬಾರಿ ಪರಿಶೀಲನೆ ವೇಳೆಗೆ ಒಂದು ಬಾರಿ ಹಾಜರಾದರೆ ಸಾಕು. ಬಳಿಕ ಆನ್‌ಲೈನ್ ಮೂಲಕವೇ ಪರಿಶೀಲನೆ ಪ್ರಕ್ರಿಯೆ ಮುಂದುವರಿಯುತ್ತದೆ` ಎಂದು ಅವರು ಮಾಹಿತಿ ನೀಡಿದರು.
`ಕಳೆದ ವರ್ಷ ಹಲವು ವಿದ್ಯಾರ್ಥಿಗಳು ಎಂಜಿನಿಯರಿಂಗ್ ಹಾಗೂ ವೈದ್ಯಕೀಯ ಎರಡನ್ನೂ ಆಯ್ಕೆ ಮಾಡಿಕೊಂಡು ಸಮಸ್ಯೆ ಸೃಷ್ಟಿಸಿಕೊಂಡಿದ್ದರು. ಪಿಯುಸಿ ಫಲಿತಾಂಶ ಪ್ರಕಟಗೊಂಡ ಬಳಿಕ ಸಿಇಟಿಗೆ ಸಾಕಷ್ಟು ಕಾಲಾವಕಾಶ ಇದ್ದು, ಈ ಅವಧಿಯಲ್ಲಿ ವಿದ್ಯಾರ್ಥಿಗಳು ಕಾಲೇಜುಗಳು ಹಾಗೂ ಕೋರ್ಸ್‌ನ ಮಾಹಿತಿ ಪಡೆಯಬೇಕು. ಮತ್ತೆ ಗೊಂದಲಕ್ಕೆ ಒಳಗಾಗುವುದು ಬೇಡ` ಎಂದು ಅವರು ಸಲಹೆ ನೀಡಿದರು. 
ರ‌್ಯಾಂಕ್ ಪಡೆಯುವುದೇ ಸಾಧನೆಯಲ್ಲ: ಬಿ.ಎಂ.ಹೆಗ್ಡೆ
`ಹೆಚ್ಚು ಅಂಕ, ರ‌್ಯಾಂಕ್ ಪಡೆಯುವುದೇ ದೊಡ್ಡ ಸಾಧನೆ ಅಲ್ಲ. ಇತರರನ್ನು ಅರ್ಥ ಮಾಡಿಕೊಂಡು ಅವರ ನೋವಿಗೆ ಸ್ಪಂದಿಸುವ ಶಿಕ್ಷಣ ದೊರಕಬೇಕು` ಎಂದು ವೈದ್ಯಕೀಯ ಲೇಖಕ ಡಾ. ಬಿ.ಎಂ. ಹೆಗ್ಡೆ ತಿಳಿಸಿದರು.

`ವೃತ್ತಿ ಮಾರ್ಗದರ್ಶನ` ಕುರಿತು ಅವರು ಉಪನ್ಯಾಸ ನೀಡಿ, `ಶೇ 100 ಅಂಕ ಪಡೆದ ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ಹೆಚ್ಚು ಅಂಕ ಗಳಿಸಲು ಅವಕಾಶಗಳು ಇರುವುದಿಲ್ಲ. ಪ್ರಥಮ ದರ್ಜೆಯಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ಹೆಚ್ಚು ಅಂಕ ಗಳಿಸಲು ಬಾಗಿಲು ತೆರೆದಿರುತ್ತದೆ. ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಜೀವನದ ಯಶಸ್ಸು ಅಲ್ಲ` ಎಂದು ಅಭಿಪ್ರಾಯಪಟ್ಟರು. 

`ತಂದೆ- ತಾಯಿಯನ್ನು ವೃದ್ಧಾಶ್ರಮಕ್ಕೆ ಸೇರಿಸುವುದು ಭಾರತೀಯ ಸಂಸ್ಕೃತಿ ಅಲ್ಲ. ಜೀವನದಲ್ಲಿ ನೈತಿಕತೆ ಅಳವಡಿಸಿಕೊಳ್ಳಬೇಕು` ಎಂದು ಅವರು ಸಲಹೆ ನೀಡಿದರು.

ಸಿಇಟಿ ಮಾಹಿತಿಗೆ ಮುಗಿಬಿದ್ದ ವಿದ್ಯಾರ್ಥಿ ಸಮೂಹ; `ಜ್ಞಾನದೇಗುಲ' ಶಿಕ್ಷಣ ಮೇಳಕ್ಕೆ ತೆರೆ

No comments:

Post a Comment