Tuesday, December 20, 2011

ಪ್ರೌಢಶಿಕ್ಷಣ ವಿಲೀನ

ಬೆಂಗಳೂರು: ಮುಂದಿನ ಶೈಕ್ಷಣಿಕ ವರ್ಷದಿಂದ 7ನೇ ತರಗತಿವರೆಗೆ ನಡೆಯುತ್ತಿರುವ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ 8ನೇ ತರಗತಿ ಪ್ರಾರಂಭಿಸುವುದರ ಜತೆಗೆ, 9ರಿಂದ ದ್ವಿತೀಯ ಪಿಯುಸಿವರೆಗಿನ ತರಗತಿಗಳನ್ನು ಒಟ್ಟಾಗಿ ನಡೆಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಶುಕ್ರವಾರ ವಿಧಾನ ಪರಿಷತ್ತಿನಲ್ಲಿ ತಿಳಿಸಿದರು.

`ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಯೋಜನೆ ಮೂಲಕ ಕೇಂದ್ರದಿಂದ ಹೆಚ್ಚಿನ ನೆರವು ಪಡೆಯಲು ಹಾಗೂ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಈ ಕ್ರಮ ಅನಿವಾರ್ಯ` ಎಂದು ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಸದಸ್ಯ ಶ್ರೀನಾಥ್ ಕೇಳಿದ ಪ್ರಶ್ನೆಗೆ ಸಚಿವರು ಉತ್ತರಿಸಿದರು.

`ಖಾಸಗಿ ಹಾಗೂ ಸರ್ಕಾರಿ ಶಾಲೆಗಳಲ್ಲಿ ಈ ವ್ಯವಸ್ಥೆಯನ್ನು ಹೇಗೆ ಜಾರಿಗೊಳಿಸಬಹುದು ಎಂಬುದರ ಬಗ್ಗೆ ವರದಿ ನೀಡಲು ಸರ್ಕಾರ ಎರಡು ಸಮಿತಿಗಳನ್ನು ರಚಿಸಲಿದೆ. ಕಾಲಮಿತಿಯೊಳಗೆ ವರದಿ ನೀಡಲು ಸಮಿತಿಗಳಿಗೆ ಸೂಚಿಸಲಾಗುವುದು. ವರದಿಯನ್ವಯ ಸರ್ಕಾರ ಮುಂದಿನ ಕ್ರಮ ಕೈಗೊಳ್ಳಲಿದೆ` ಎಂದು ಅವರು ತಿಳಿಸಿದರು.

`ಈ ವ್ಯವಸ್ಥೆ ಜಾರಿಗೆ ಕೇಂದ್ರದಿಂದ ಬಹಳ ಒತ್ತಡವಿದೆ. ಬೇರೆ ರಾಜ್ಯಗಳು ಕೂಡ ಈ ಪದ್ಧತಿಯನ್ನು ಅನುಸರಿಸುತ್ತಿವೆ. ಕರ್ನಾಟಕವೂ ಕೇಂದ್ರದ ನಿಯಮಗಳನ್ನು ಪಾಲಿಸುವುದು ಅನಿವಾರ್ಯವಾಗಿದೆ. ಹೀಗಾಗಿ, ಇನ್ನು ಮುಂದೆ 1ರಿಂದ 5ರವರೆಗೆ ಕಿರಿಯ ಪ್ರಾಥಮಿಕ, 6ರಿಂದ 8ರವರೆಗೆ ಹಿರಿಯ ಪ್ರಾಥಮಿಕ ಹಾಗೂ 9ರಿಂದ 12ನೇ ತರಗತಿವರೆಗೆ ಪ್ರೌಢ ಶಿಕ್ಷಣವನ್ನಾಗಿ ಪರಿಗಣಿಸಲಾಗುವುದು` ಎಂದರು.

4233 ಹುದ್ದೆ ಖಾಲಿ: `ರಾಜ್ಯದಲ್ಲಿನ 2409 ಸರ್ಕಾರಿ ಪ್ರೌಢಶಾಲೆಗಳಲ್ಲಿ 435 ದೈಹಿಕ ಶಿಕ್ಷಕರ ಹುದ್ದೆಗಳೂ ಸೇರಿದಂತೆ ಒಟ್ಟು 4233 ಶಿಕ್ಷಕರ ಹುದ್ದೆಗಳು ಖಾಲಿ ಇವೆ. ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಯೋಜನೆಯಡಿ ಉನ್ನತೀಕರಿಸಿದ ಶಾಲೆಗಳಲ್ಲಿ 1824 ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲು ಹಣಕಾಸು ಇಲಾಖೆ ಒಪ್ಪಿಗೆ ಸೂಚಿಸಿದೆ. ಮುಂದಿನ ಶೈಕ್ಷಣಿಕ ವರ್ಷದ ವೇಳೆಗೆ ಈ ಹುದ್ದೆಗಳನ್ನು ಭರ್ತಿ ಮಾಡಲಾಗುವುದು` ಎಂದು ಸಚಿವರು ತಿಳಿಸಿದರು.

ದೈಹಿಕ ಶಿಕ್ಷಣ ಅಧಿಕಾರಿಗಳು ಹಾಗೂ ಶಿಕ್ಷಕರ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತರುವ ಸಂಬಂಧ ಸರ್ಕಾರ ವಿವಿಧ ಇಲಾಖೆಗಳೊಂದಿಗೆ ಸಭೆ ನಡೆಸಿ, ಇಲಾಖೆಯ ಸಮಗ್ರ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಅಂತಿಮಗೊಳಿಸಿದೆ. ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳ ನೇತೃತ್ವದ ಸಮಿತಿ ಅಂತಿಮಗೊಳಿಸಿದ ನಂತರ ವೃಂದ, ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತರಲಾಗುವುದು ಎಂದು ಸಚಿವರು ಸದಸ್ಯ ಮರಿತಿಬ್ಬೇಗೌಡ ಪ್ರಶ್ನೆಗೆ ಉತ್ತರಿಸಿದರು.

ದೈಹಿಕ ಶಿಕ್ಷಣ ವಿಭಾಗದಲ್ಲಿ ಸುಧಾರಣೆ ತರುವ ಸಂಬಂಧ ಸರ್ಕಾರ ಪ್ರೊ. ವೈದ್ಯನಾಥನ್ ಸಮಿತಿ ವರದಿಯನ್ನು ಒಪ್ಪಿದೆ. ಅದರಂತೆ, 2009-10ನೇ ಶೈಕ್ಷಣಿಕ ಸಾಲಿನಿಂದ 6, 7, 8 ಮತ್ತು 9ನೇ ತರಗತಿಗೆ ಪ್ರಥಮ ಹಂತದಲ್ಲಿ ಕನ್ನಡ ಮಾಧ್ಯಮದಲ್ಲಿ ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಣ ಪಠ್ಯಕ್ರಮ ಜಾರಿಗೊಳಿಸಲಾಗಿದೆ. ಮುಂದಿನ ಸಾಲಿನಿಂದ 10ನೇ ತರಗತಿ ವಿದ್ಯಾರ್ಥಿಗಳಿಗೂ ಈ ಪಠ್ಯಕ್ರಮವನ್ನು ಜಾರಿಗೆ ತರಲಾಗುವುದು ಎಂದರು.

Click on this link Prajavani news

No comments:

Post a Comment