Thursday, March 26, 2015

You must see the illegalities in the Departmentof PUE-Open letter

Respected Director,
See the below News paper report first.

ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರೇ,  ನಿಮ್ಮ ಕಚೇರಿಯಲ್ಲಿ ನಡೆಯುವ/ನಡೆಯುತ್ತಿರುವ ಅಕ್ರಮಗಳನ್ನು ನಿಮ್ಮ ಗಮನಕ್ಕೆ ತರುವ ಉದ್ದೇಶದಿಂದ ನಿಮ್ಮೊಂದಿಗೆ ಒಂದು ಅಧಿಕೃತ ಭೇಟಿಗೆ ಕೋರಿದ್ದೆನು. ನೀವು ಅದನ್ನು ಉದ್ದೇಶಪೂರ್ವಕವಾಗಿ ನಿರಕಾರಿಸಿರುತ್ತೀರೆಂದು ನನಗೆ ತಿಳಿಯಿತು. ಜೊತೆಗೆ ಒಬ್ಬ ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿಯ ಈ ತರಹದ ನಡೆಯಿಂದ ಬೇಸರದ ಜೊತೆಗೆ ಅಸಹ್ಯವೂ ಮೂಡಿತು. ನನಗೆ ನಿಮ್ಮ ಕಚೇರಿಯಲ್ಲಿ ಯಾರ ಮೇಲೂ ದ್ವೇಷವಿಲ್ಲ, ಅಥವಾ ಯಾರ ಪರವಾಗಿಯೂ ನಾನು ಮಾತನಾಡುವುದಿಲ್ಲ. ಅಕ್ರಮ ಅಕ್ರಮವೇ. ಅದು ನಿಮ್ಮಿಂದಾಗಲೀ ಅಥವಾ ನಿಮ್ಮ ಕೈಕೆಳಗಿನ ಅಧಿಕಾರಿಯಿಂದಾಗಲೀ! ನಿಮ್ಮ ಕಚೇರಿಯಲ್ಲಿ ನಡೆಯುತ್ತಿರುವ ಅಕ್ರಮಗಳ ಬಗ್ಗೆ ನಿಮಗೆ ಗೊತ್ತಿದ್ದೂ ಏಕೆ ಸುಮ್ಮನಿದ್ದೀರೋ ನನಗೆ ತಿಳಿಯದು. (ಗೊತ್ತಿಲ್ಲದಿದ್ದರೆ ಅದು ನಿಮ್ಮದೇ ತಪ್ಪು) ನಿಮ್ಮ ಸುತ್ತಾ ಇರೋ ಎಲ್ಲಾ ಅಧಿಕಾರಿಗಳು ನಿಮ್ಮ ಹೊಗಳು ಭಟ್ಟರೇ  ಹೊರತು  ಇಲಾಖೆಗೆ ಮತ್ತು ನಿಮಗೆ ಗೌರವ ತರುವ ಯಾವುದೇ ಕೆಲಸಗಳನ್ನು ಮಾಡುತ್ತಿಲ್ಲ ಎಂಬುದು ನಿಜವಾದ ಸಂಗತಿ. ಈ ಸಂಗತಿಯನ್ನು ಅರಗಿಸಿಕೊಳ್ಳಲು ನಿಮಗೆ ಕಷ್ಟವಾಗಬಹುದು. ಯಾರೊಬ್ಬರು ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕಿ ಆದ ಮಾತ್ರಕ್ಕೆ ಮತ್ತು ಐ.ಎ.ಎಸ್. ಆದ ಮಾತ್ರಕ್ಕೆ ಇಲಾಖೆಯ ಎಲ್ಲಾ ವಿಷಯ/ನಿಯಮಗಳು ತಿಳಿದಿರುತ್ತದೆ ಎಂಬ ಮಾತು ಅಪ್ಪಟ ಸುಳ್ಳು. 
         ನಿಮ್ಮ ಕೈಕೆಳಗಿರುವ ಅಧಿಕಾರಿಗಳು ನಿಮಗೆ ಚಳ್ಳೆ ಹಣ್ಣು ತಿನ್ನಿಸಿ ಅಕ್ರಮಗಳನ್ನು ಮಾಡಿಸಿರುವುದನ್ನು ನಿಮ್ಮ ಗಮನಕ್ಕೆ ದಾಖಲೆಗಳ ಸಮೇತ ತರುತ್ತೇನೆ. ನಿಮ್ಮಿಂದ ಎಷ್ಟು ನಿಯಮಗಳು ಉದ್ದೇಶಪೂರ್ವಕವಾಗಿ ಉಲ್ಲಂಘನೆಯಾಗಿವೆ ಎಂಬುದನ್ನೂ ನಿಮ್ಮ ಗಮನಕ್ಕೆ ತರುತ್ತೇನೆ. ನನಗೆ ನಿಮ್ಮ ಇಲಾಖೆಯ ಸುಧಾರಣೆಯಿಂದ ಆಗಬೇಕಾದ್ದೇನೂ ಇಲ್ಲ. ಆದರೆ ಕಷ್ಟ ಅನುಭವಿಸುತ್ತಿರುವ  ಸಾರ್ವಜನಿಕರು ಮತ್ತು ಅವರ ತೆರಿಗೆಯಿಂದ ಸಂಬಳ ಪಡೆಯುತ್ತಿರುವ ನಿಮ್ಮಂತಹಾ ಸಾರ್ವಜನಿಕ ಅಧಿಕಾರಿಗಳು ನಿಯಮಾನುಸಾರ ಕೆಲಸ ಮಾಡಬೇಕೆ ಹೊರತು ನಿಮ್ಮ ಇಚ್ಚೆಯಂತಲ್ಲ. ಅವರವರ ಇಚ್ಚೆಯಂತೆ ಕೆಲಸ ಮಾಡಲು ಇದು ಯಾರೊಬ್ಬರ ವೈಯಕ್ತಿಕ ಸ್ವತ್ತಲ್ಲ. ಪ್ರತಿಯೊಂದು ಪೈಸೆಗೂ ಲೆಕ್ಕ ಇಡಬೇಕಾದ್ದು ಮತ್ತು ಅದನ್ನು ಸಾರ್ವಜನಿಕ ಬಳಕೆಗೆ ವಿನಿಯೋಗಿಸಬೇಕಾದ್ದು ನಿಮ್ಮ ಕರ್ತವ್ಯ. ಅದನ್ನು ತಿಳಿ ಹೇಳಲಿಕ್ಕೆಂದು ನಿಮ್ಮೊಂದಿಗೆ ಅಧಿಕೃತ ಭೇಟಿ ಬಯಸಿದ್ದು. 
         ಸಾರ್ವಜನಿಕರಿಗೆ ಸಿಗದೇ,  ನಿಮ್ಮ ನಿರ್ಧಾರಕ್ಕೆಂದು ಬಂದಿರುವ ಕಡತಗಳನ್ನು ತಿಂಗಳುಗಟ್ಟಲೆ ಇಟ್ಟೊಕೊಂಡು ಮೀಟಿಂಗ್ ಎಂದು ಹೇಳುತ್ತಾ ನಾಲ್ಕಾರು ತಿಂಗಳಿಂದ ಪ್ರಮುಖ ಕಡತಗಳ ಮೇಲೆ ಕ್ರಮ ತೆಗೆದುಕೊಳ್ಳದಿರುವ ನಿಮ್ಮ ಕ್ರಮವನ್ನು ಯಾರೂ ಶ್ಲಾಘಿಸುವುದಿಲ್ಲ. ಅದನ್ನೇ ಬಂಡವಾಳ ಮಾಡಿಕೊಳ್ಳೋ ನಿಮ್ಮ ಕೈಕೆಳಗಿನ ಅಧಿಕಾರಿಗಳು ಕಡತ ಸಂಬಂಧಪಟ್ಟ ಖಾಸಗಿ ಕಾಲೇಜುಗಳವರಿಂದ ಹಣ ವಸೂಲಿ ಮಾಡಿಕೊಂಡು ಇದು ಸಿ.ಎಂ./ಮಿನಿಷ್ಟರ್ ಪೋನ್ ಮಾಡಿದ್ರು ಮೇಡಂ ಅಂತಾ ಹೇಳಿ ನಿಮ್ಮಿಂದ ಸೈನ್ ಪಡೀತಾರೆ. ಇದೆಲ್ಲವನ್ನೂ ಜನ ಹೇಳಬೇಕೆಂದು ಕೊಂಡು ನಿಮ್ಮ ಬಳಿಗೆ ಬಂದರೆ ಅದನ್ನೂ ತಡೆಯುವ ಅಧಿಕಾರಿಗಳು ನಿಮಗೆ ರಾಷ್ಟ್ರಪತಿಗಿಂತ ಹೆಚ್ಚಿಗೆ ಕೆಲಸ ಇದೆ ಅನ್ನೋ ರೀತಿಲಿ ಕೃತಕ ಪರಿಸರ ಶೃಷ್ಟಿ ಮಾಡುತ್ತಾರೆ. ಮರೆಯದಿರಿ ನೀವು ದೇವರಲ್ಲ.. ನೀವೊಬ್ಬರು ಸಾರ್ವಜನಿಕ ನೌಕರಿಣಿ ಅಷ್ಟೇ!
ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರಾಗಿ ಈ ಕೆಳಗಿನ ವಿಚಾರಗಳನ್ನು ಎಂದಾದರೂ ಪರಿಶೀಲಿಸಿದ್ದೀರಾ?
೧. ನಿಮ್ಮ ಕಚೇರಿಯಲ್ಲಿ ಯಾರು ತಾನೇ ಬೆಳಿಗ್ಗೆ ಸರಿಯಾದ ಸಮಯಕ್ಕೆ (೧೦ ಗಂಟೆಗೆ) ಕಚೇರಿಗೆ ಬರುತ್ತಾರೆ?   
೨. ನಿಮ್ಮ ಕಚೇರಿಯಲ್ಲಿ ಯಾರು ಸಂಜೆ ಕಚೇರಿ ಸಮಯ ಮುಗಿದ ನಂತರ ತೆರಳುತ್ತಾರೆ?
೩. ನಿಮ್ಮ ಕಚೇರಿಯಲ್ಲಿ ಯಾರನ್ನು ಸಂಪನ್ಮೂಲ ವ್ಯಕ್ತಿ ಎಂದು ಪರಿಗಣಿಸಿ ಅವರ ಸಲಹೆ ಸೂಚನೆ ಪಡೆಯುತ್ತಿದ್ದೀರಾ?
೪. ಎಂದಾದರೂ ಇಲಾಖೆಯಲ್ಲಿ ರೆವಿನ್ಯೂ ರೀ ಕಾನ್ಸಿಲಿಯೇಷನ್ ಆಗ್ತಾ ಇದೆಯಾ ಎಂದು ಪರಿಶೀಲಿಸಿದ್ದೀರಾ?
೫. ಖಾಸಗಿ ಕಾಲೇಜುಗಳ ಮಾನ್ಯತೆ ನವೀಕರಣಕ್ಕೆ ನೀವು ತಯಾರು ಮಾಡೋ ಚೆಕ್ ಲಿಸ್ಟ್ ಕರ್ನಾಟಕ ಶಿಕ್ಷಣ ಕಾಯ್ದೆ ಮತ್ತು ಪದವಿ ಪೂರ್ವ ಶಿಕ್ಷಣ ನಿಯಮಗಳು ೨೦೦೬ಗೆ ಅನುಸಾರವಿದೆಯೇ ಎಂದು ಕ್ರಾಸ್ ವೆರಿಪಿಕೇಷನ್ ಮಾಡಿದ್ದೀರಾ?
೬. ಕಾರ್ಯಭಾರ ಇಲ್ಲದಿರೋ (೮ ಅವಧಿ ಮಾತ್ರ) ಹುದ್ದೆಗಳನ್ನು ಭರ್ತಿ ಮಾಡೋಕೆ ಆಡಳಿತ ಮಂಡಳಿಗೆ ಅನುಮತಿ ನೀಡುತ್ತಿದ್ದೀರಲ್ಲ ಅದು ಯಾವ ನಿಯಮದ ಉಲ್ಲಂಘನೆ ಅಂತಾ ಗೊತ್ತೇ?
೭. ಇಲ್ಲೀಗಲ್ ಆಗಿ ಪ್ರಾಂಶುಪಾಲರ ಹುದ್ದೆಗೆ ಪ್ರಮೋಷನ್ ಅಪ್ರೂವ್ ಮಾಡುತ್ತಿದ್ದೀರಲ್ಲ -ಯಾವ ನಿಯಮಗಳ ಅನುಸಾರ ನಿಯಮಬಾಹಿರ ಅಪ್ರೂವಲ್ ಮಾಡುತ್ತಿದ್ದೀರಾ ?
೮. ಕೆ.ಸಿ.ಎಸ್. ಅರ್. ನಿಯಮಗಳ ಅನುಸಾರ ಶ್ರೀ ವಿನಾಯಕ್ ಇವರನ್ನು ನಿವೃತ್ತಿಯ ನಂತರ ನೇಮಕ ಮಾಡಿದ್ದಿರಾ? ಹಾಗಿದ್ದಲ್ಲಿ ಅದಕ್ಕೆ ಸರ್ಕಾರದ ಪೂರ್ವಾನುಮತಿ ನಿಮ್ಮ ಬಳಿ ಇದೆಯೇ?
೯. ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರ ಕೆಲಸ ಕೇವಲ ಪರೀಕ್ಷೆಗಳನ್ನು ನಡೆಸುವುದಷ್ಟೇ ಅಲ್ಲ ಜೊತೆಗೆ ಶಿಕ್ಷಣ ಕಾಯ್ದೆಯ ಕಲಮು ೫೭ ಮತ್ತು ಪ.ಪೂ.ನಿಯಮಗಳು ೨೦೦೬ರ ನಿಯಮ ೬ನ್ನು ಎಂದಾದರೂ ಅಭ್ಯಾಸ ಮಾಡುವ ಅವಕಾಶ ನಿಮಗೆ ಸಿಕ್ಕಿದೆಯೇ?
೧೦. ನಿಮ್ಮ ಇಲಾಖೆಯಲ್ಲಿ ಸುಮಾರು ವರ್ಷಗಳಿಂದ ಇದ್ದು ನಿಯಮಗಳಲ್ಲಿ ಪರಿಣಿತಿ ಪಡೆದಿರುವ ಅಧಿಕಾರಿ ನೌಕರರ ಅಭಿಪ್ರಾಯಯನ್ನು ಯಾವುದಾದರೂ ಸಂಕೀರ್ಣ ಕಡತದಲ್ಲಿ ಪಡೆದಿರುವಿರಾ?
ನಿಮ್ಮ ಕಾರ್ಯ ವೈಕರಿ ಮತ್ತು ಮುಕ್ತ ಜನಾಭಿಪ್ರಾಯಕ್ಕೆ ಸಿದ್ಧರಿರುವಿರಾದರೆ ನಾನು ನಿಮ್ಮೆಲ್ಲ ನೌಕರರ ಮುಂದೆ ನಿಮ್ಮ ಇಲಾಖೆಯಿಂದ ಆಗಿರುವ ಅಕ್ರಮಗಳು/ನಿಮ್ಮ ಅವಧಿಯಲ್ಲಿ ಆಗಿರುವ ಕಾನೂನು ಬಾಹಿರ ಆದೇಶಗಳನ್ನು ದಾಖಲೆ ಸಮೇತ ನಿಮ್ಮ ಮುಂದೆ ಇಡಲಿದ್ದೇನೆ. ಅದಕ್ಕಾಗಿ ಅವಕಾಶ ಕೊಡಲು ಸಿದ್ಧರಿರುವಿರಾ?

ಇವೆಲ್ಲವುಗಳು ಸಾರ್ವಜನಿಕ  ಹಿತಾಸಕ್ತಿಯಿಂದ ನಿಮಗೆ ನಾನು ಕೇಳುತ್ತಿರುವ ವಿಚಾರಗಳು. ಇಲಾಖೆಯ ಮುಖ್ಯಸ್ಥರು ನೀವು. ಇಲಾಖೆಯ ಎಲ್ಲಾ ನಿಯಮಬಾಹಿರ ಕಾರ್ಯಗಳಿಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ನೀವೇ ಜವಾಬ್ದಾರಿ. ಇನ್ನಾದರೂ ಈ ಅಕ್ರಮಗಳನ್ನು ತಡೆಗಟ್ಟಿ ನಿಯಮಾನುಸಾರ ಕರ್ತವ್ಯ ನಿರ್ವಹಿಸಿಕೊಂಡು ಹೋಗಿ ಎಂದು ಆಶಿಸುವೆ. ನಿಮ್ಮ ಇಲಾಖೆಯಲ್ಲಿ ನಿಯಮಬಾಹಿರ/ಅಕ್ರಮ ಆದೇಶಗಳು ಮುಂದುವರೆಯುವವರೆಗೆ ನನ್ನ ಈ ಬರಹವೂ ಬ್ಲಾಗ್ ನಲ್ಲಿ ಮುಂದುವರೆಯುತ್ತದೆ  ಮತ್ತು ನಿಮ್ಮ ಇಲಾಖೆಯ ಈ ಕೃತ್ಯಗಳನ್ನು ಸಕ್ಷಮ ಪ್ರಾಧಿಕಾರಗಳ ಗಮನಕ್ಕೆ ತರುವ ಯತ್ನವೂ ನಡೆಯುತ್ತದೆ. ಇಲಾಖೆಯಲ್ಲಿ ಸುಧಾರಣೆ ತಂದು ಅದನ್ನು ತಪ್ಪಿಸುವಿರೆಂಬ ಸದುದ್ದೇಶದೊಂದಿಗೆ... 

ಸಾರ್ವಜನಿಕ ಹಿತದೃಷ್ಟಿಯಿಂದ 
ಸಿ.ಎಸ್. ಮಧು 
ನ್ಯಾಯವಾದಿ 
ಬೆಂಗಳೂರು 

No comments:

Post a Comment